Tuesday, 23 June 2020

ನಾನು ಬಾಣಸಿಗನಾದಾಗ ಹಾಸ್ಯ ಲೇಖನ



‘ಹೋಂ ಐಸೊಲೇಷನ್’ ಡಿಕ್ಲೇರಿಸಿತು ವೈದ್ಯಪಡೆ.
ವಿದೇಶದಿಂದ ಹೆಂಡತಿ, ಮಗಳಿಬ್ಬರೂ ‘ಊಟಕ್ಕುಂಟು ನೋಟಕ್ಕಿಲ್ಲ’ ಸ್ಥಿತಿಯಲ್ಲಿ ರೂಮ್ ಸೇರಿದರು. ಅವರಿಬ್ಬರ ಪ್ರಾವೀಣ್ಯತೆಯ ಅಡಿಗೆ ಕೆಲಸ ನನ್ನ ಪಾಲಿಗೆ! ಸಚಿನ್ ತೆಂಡುಲ್ಕರ್‌ಗೆ ಬದಲಿ ಆಟಗಾರನಾಗಿ ಇಶಾಂತ್ ಶರ್ಮಾ ಬ್ಯಾಟಿಂಗಿಗೆ ಬಂದಂತಾಯಿತು.
ಗುಡ್ ಓಲ್ಡ್ ದಿನಗಳಲ್ಲಿ ಅಮ್ಮ ಹೊರಗಾದಾಗ ಈ ತರಹದ ‘ಸಬ್‌ಸ್ಟಿಟ್ಯೂಟ್ ಕುಕ್ಕ’ ಆಗಿದ್ದರೂ, ಆಗ ‘ಡಿಸ್ಟೆನ್ಸ್ ಎಜುಕೇಷನ್’ ಮೂಲಕ ಕುಳಿತಲ್ಲಿಂದಲೇ ಇಷ್ಟೇ ಖಾರ, ಉಪ್ಪು, ಹುಳಿಗಳ ಪಾಠ ನಡೆಯುತ್ತಿತ್ತು. ಈಗ ‘ಸರ್ವತಂತ್ರ ಸ್ವತಂತ್ರ’ನಾಗಿ ‘ಸೌಟೇಶ ಲೋಟೇಶ ಪಾತ್ರೇಶ’ ಆಗುವುದರ ಮೂಲಕ ಜಗ್ಗೇಶನ ಡಿಸ್ಟೆಂಟ್ ಕಸಿನ್ ಆಗಿ ಪಾಕಕೂಪಕ್ಕೆ ಇಳಿದೆ.

ಜಗತ್ತನ್ನು ಅತಿ ಹೆಚ್ಚು ಕಾಡುವ ಪ್ರಶ್ನೆಯಾದ ‘ಏನ್ತಿಂಡಿ ಮಾಡೋದು?’ ಧುತ್ತನೆ ಎದುರಾಯಿತು. ಥಟ್ಟನೆ ಮಹಾಕವಿ ಕಾಳಿದಾಸನೂ ನೆನಪಾಗಿ ಅವನ ಬಿರುದಾದ ‘ಉಪಮಾ ಕಾಳಿದಾಸಸ್ಯ’ದಲ್ಲೇ ಉತ್ತರವೂ ಸಿಕ್ಕಿತು. ಜಗದಲ್ಲಿ ಉಪ್ಪಿಟ್ಟೆಂದರೆ ಕಾಳಿದಾಸನ ಉಪ್ಪಿಟ್ಟೇ. ಅವನ ಕವನಗಳನ್ನು ನಕಲು ಮಾಡಿದವರು ‘ಕಾಳಿದಾಸ’ ಎನ್ನುವುದರ ಬದಲು ‘ಖಾಲಿದೋಸೆ’ ಎಂದು ಬರೆದುದರ ಪರಿಣಾಮವಾಗಿ ಕರುನಾಡಿನ ಎರಡನೆಯ ತಿಂಡಿ ಕಾವಲಿಯೇರಿತ್ತಂತೆ.

ಉಪ್ಪಿಟ್ಟಿಗೆ ಅಗತ್ಯವಾದುದನ್ನು ಅಣಿ ಮಾಡಿಕೊಳ್ಳಬೇಕಲ್ಲ! ಶುರುವಾಯಿತು ಪೀಕಲಾಟ. ಒಂದಾನೊಂದು ಕಾಲದಲ್ಲಿ ಸಾರು ಮಾಡಲೆಂದು ನೀರಿಗೆ ಬೇಳೆ ಸುರಿದು ಬತ್ತಿ ಸ್ಟೌವಿನ ಮೇಲೆ ಇಟ್ಟಿದ್ದೆ. ಸ್ಟೌವಿನ ಎಣ್ಣೆ ಮುಗಿದರೂ ಬೇಳೆ ಹೇಗಿತ್ತೋ ಹಾಗೆಯೇ ಇದ್ದಂತೆ ಕಾಣುತ್ತಿತ್ತು. ಮೂಲೆಯ ‘ಡಿಸ್ಟೆನ್ಸ್ ಎಜುಕೇಷನ್’ ಒಲೆಗೆ ಸೀಮೆಯೆಣ್ಣೆ ಸುರಿಯುವುದನ್ನು ಎಜುಕೇಟ್ ಮಾಡಿದಮೇಲೆ ಮತ್ತೆ ಅರ್ಧ ಗಂಟೆ ಇಟ್ಟರೂ ಬೇಳೆ ‘ನಿಲಯದ ವಾತಾವರಣದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ’ ಎಂಬ ಹವಾಮಾನ ವರದಿಯನ್ನು ಫಾಲೋ ಮಾಡುತ್ತಿರುವಂತೆ ‘ಸ್ಟೇಟಸ್ ಕೋ’ ಮೇಯ್ನ್ ಟೇಯ್ನ್  ಮಾಡಿಕೊಂಡಿತ್ತು.‘ಬೆಂದಿದೆಯಾ ನೋಡು’ ಎಂದಿತು ಡಿಸ್ಟೆನ್ಸ್ ಎಜುಕೇಷನ್ ವಾಣಿ.


ಬೇಳೆಯನ್ನು ತಟ್ಟೆಗೆ ಹಾಕಿ ಬೆರಳಿನಿಂದ ಒತ್ತಿದೆ. ತುಂಬಿದ ಬಸ್ಸಿನಲ್ಲಿ ಮುಂದಿರುವ ಠೊಣಪನನ್ನು ತಳ್ಳಿದರೆ ಸಡಿಲವಾದ ಬೊಜ್ಜು ಮಾತ್ರ ಕೊಂಚ ಒಳಹೋಗುವಷ್ಟು ಒಳಹೋಯಿತು.
‘ಬೆಂದ್ಹಾಗೂ ಇದೆ, ಬೇಯದ್ಹಾಗೂ ಇದೆ’ ಎಂದೆ.
‘ಸರಿ. ಟೈಮಾಯ್ತು. ಉಪ್ಪುಹುಳಿಖಾರ ಹಾಕ್ಬಿಡು’ ಎಂದಿತು ವಾಣಿ.
ಕಡೆಗೆ ಬಾಳೆಯೆಲೆಯೊಂದರ ಮೇಲೆ ಸಾರನ್ನು ಹಾಕಿ ‘ಮೂಲೆಗೆ’ ನೀಡಿದಾಗಲೇ ಅದು ತೊಗರಿಯಲ್ಲ, ಕಡಲೆಬೇಳೆ ಎಂದು ತಿಳಿದದ್ದು.ಈಗ ಅವೇ ಎರಡು ಬೇಳೆಗಳ ಡಬ್ಬಗಳು ನನ್ನ ಮುಂದೆ ಕುಳಿತು ‘ನಾನು ಯಾರು, ಯಾವ ಬೇಳೆ, ಇಲ್ಲಿ ಯಾರೂ ಬಲ್ಲೋವ್ರಿಲ್ಲಾ’ ಎಂದು ‘ಅಂತ’ ಚಿತ್ರದ ‘ಕನ್ವರ್‌ಲಾಲ್’ನಂತೆ ನನ್ನತ್ತಲೇ ನೋಡುತ್ತಾ ಲೇವಡಿ ಹಾಡುತ್ತಿರುವಂತೆ ಭಾಸವಾಯಿತು. ನನ್ನ ತರಬೇತಿರಹಿತ ಕಣ್ಣುಗಳಿಗೆ ಎರಡೂ ‘ಒಂದೇ ರೂಪ, ಎರಡು ಗುಣ’ದಂತೆ ಕಂಡವು. ಗತ್ಯಂತರವಿಲ್ಲದೆ ಸಹಾಯಕ್ಕೆ ಮೊರೆಹೋದೆ.  ಧ್ವನಿಗೆ ‘ಐಸೊಲೇಷನ್’ ಇಲ್ಲವಲ್ಲ! ‘ಇವೆರಡಲ್ಲಿ ತೊಗರಿಬೇಳೆ ಯಾವುದೆಂದು ಕಂಡುಹಿಡಿಯುವುದು ಹೇಗೆ?’ ಎಂದೆ.

‘ನಾನು ಮಾಮೂಲಾಗಿ ಇರುವುದು ತೊಗರಿ ಬಣ್ಣ. ಕೋಪ ಬಂದಾಗ ಕಡಲೆ’ ಎಂದಿತು ಐಸೊಲೇಷನ್ ಧ್ವನಿ. ಆಯ್ಕೆ ಸುಲಭವಾಯಿತು. ಒಂದು ತೊಂದರೆ ಮುಗಿದರೆ ಇನ್ನೊಂದರ ಆರಂಭ! ಸಾಸಿವೆ ಮತ್ತು ಕರಿ ಎಳ್ಳುಗಳ ಡಬ್ಬಗಳೂ ಪಕ್ಕಪಕ್ಕವೇ ಇದ್ದವು! ಒಂದು ಕ್ಷಣ ಉಪ್ಪಿಟ್ಟಿನ ತಯಾರಿಕೆಗೇ ಎಳ್ಳುನೀರು ಬಿಟ್ಟುಬಿಡೋಣ ಎಂದುಕೊಂಡೆ. ಆದರೆ ಅದಕ್ಕೂ ಎಳ್ಳು ಯಾವುದೆಂದು ತಿಳಿಯಬೇಕಲ್ಲ! ಮತ್ತೆ ಐಸೊಲೇಷನ್ ಧ್ವನಿಗೆ ಮೊರೆಹೋದೆ. ‘ಎರಡನ್ನೂ ಸ್ವಲ್ಪಸ್ವಲ್ಪ ತೊಗೊಂಡು ಬೋರಲು ಹಾಕಿದ ಸ್ಟೀಲ್ ತಟ್ಟೆಯ ಮೇಲೆ ಹಾಕಿ. ವ್ಯಾಲೆಂಟೈನ್ಸ್ ಡೇ ಲವರ್ಸ್ ತರಹ ಓಡಿಹೋಗೋದು ಸಾಸಿವೆ. ಸಚಿವಸ್ಥಾನ ಹೋದರೂ ಸಚಿವರ ಕ್ವಾರ್ಟರ್ಸ್ ಬಿಡಲ್ಲ ಅಂತ ಕೂತಲ್ಲೇ ಕೂತ್ಕೊಳ್ಳೋದು ಎಳ್ಳು’ ಎಂದಿತು ಧ್ವನಿ. ಮಿಕ್ಕೆಲ್ಲವನ್ನೂ ಹವಣಿಸಿಕೊಂಡು, ಎಂಟೇ ಬಾರಿ ಲೈಟರ್ ಕ್ಲಿಕ್ಕಿಸಿ, ಗ್ಯಾಸ್ ಸ್ಟೌವ್ ಧಗ್ಗಿಸಿದೆ.
ಹದಿನೈದು ದಿನಗಳಿಂದ ಬಾಂಡಲೆಯ ಸುದ್ದಿಗೇ ಹೋಗಿರದ ಕಾರಣ ಜೇಡವೊಂದು ತನ್ನೆಲ್ಲ ಕೌಶಲ ಪ್ರದರ್ಶನಕ್ಕಾಗಿ ಬಾಂಡಲೆಯ ಎರಡು ಕಿವಿಗಳನ್ನು ಫ್ರೇಮ್ ಆಗಿಸಿಕೊಂಡು ಬಾಂಡಲೆಯಗಲಕ್ಕೂ ಬಲೆ ನೇಯ್ದಿತ್ತು. ಅಕ್ರಮ ಕಟ್ಟಡಗಳ ಅಷ್ಟೇ ಅಕ್ರಮ ನೆಲಸಮ ಕಾರ್ಯವನ್ನು ‘ಸ್ಕ್ರೀಮರ್’ ವಾಹಿನಿಗಳಲ್ಲಿ ನೋಡಿ ಪಳಗಿದ್ದ ನನಗೆ ಒಂದು ಅಕ್ರಮ ಜೇಡರಬಲೆಯನ್ನು ಧೂಳೀಪಟ ಮಾಡಲು ಕಷ್ಟವೇನಾಗಲಿಲ್ಲ. ಬಾಂಡಲೆಯನ್ನು ಚೆನ್ನಾಗಿ ತೊಳೆದು ಕೊಂಚವೇ ಎಣ್ಣೆ ಹಾಕಿ ಅದು ಕಾಯಲೆಂದು ಕುಳಿತೆ. ನಿಧನಿಧಾನವಾಗಿ ಎಣ್ಣೆ ಕಾಯಿತು. ‘ತಿಂಡಿ ಮಾಡ್ರಿ ಅಂದ್ರೆ ಅಭ್ಯಂಜನಕ್ಕೆ ರೆಡಿ ಆಗ್ತಿದ್ದೀರಾ?’ ಎಂದಳು ರೂಮಿನಿಂದಲೇ ಮಡದಿ. ನನ್ನ ಮಡದಿಯ ಮೂಗು ನೋಡಲು ಮೊಂಡು. ಆದರೆ ವಾಸನೆ ಹಿಡಿಯುವುದರಲ್ಲಿ ಶಾರ್ಪು! ನಾನು ಬಾಂಡಲೆಗೆ ಹಾಕಿದ್ದು ಕಡಲೆಕಾಯಿ ಎಣ್ಣೆಯಲ್ಲ, ಹರಳೆಣ್ಣೆ ಎಂದು ಅಲ್ಲಿಂದಲೇ ಸ್ಮೆಲ್ಲಿಸಿ ಎನ್‌ ಕ್ವೈರಿಗೆ ತೊಡಗಿದ್ದಳು!
‘ಪುನರಪಿ ಮಾರ್ಜನಂ ಪುನರಪಿ ತೈಲಂ ಪುನರಪಿ ತೈಲೇ ಮಸ್ಟರ್ಡ್ ಸ್ಪ್ಲಟರಂ’ ಎಂದು ಶ್ಲೋಕ ಹೇಳುತ್ತಾ ಬಾಂಡಲೆಯನ್ನು ತೊಳೆದು ಎಣ್ಣೆ ಹಾಕಿ ಸ್ಟೌವಿನ ಮೇಲಿರಿಸಿದೆ. ಆಹಾ! ಮಹಾರಾಷ್ಟ್ರದ ಸಚಿವರು ಕಾಂಗ್ರೆಸ್ ಪಕ್ಷ ಬಿಟ್ಟು ಹೊರಸಿಡಿದಂತೆ ಬಾಂಡಲೆ ತೊಳೆದ ಪರಿಣಾಮವಾಗಿ ಉಳಿದಿದ್ದ ನೀರಿನ ಕಣಗಳು ಕಾದ ಎಣ್ಣೆಯ ಪದರಗಳಿಂದ ಹೊರಚಿಮ್ಮತೊಡಗಿದವು. ಅದೇಕೆಂದು ನೋಡಲು ಬಾಂಡಲೆಯತ್ತ ಬಾಗಿದೆ. ಪ್ರಥಮ ಪ್ರಯತ್ನೇ ವಕ್ತ್ರದಗ್ಧಂ! ‘ರವೆ ಹುರೀರಿ ಅಂದ್ರೆ ಚರ್ಮಾನೇ ಹುರ‍್ಕೋತಿದೀರೇನ್ರೀ... ನಾನ್‌ವೆಜ್ ಉಪ್ಪಿಟ್ಟು ಆಗತ್ತಷ್ಟೆ’ ಗದರಿತು ಅಶರೀರವಾಣಿ. ಹುಚ್ಚೆದ್ದು ಕುಣಿಯುವ ಶಾಸಕರು ಇರುವ ಸೆಷನ್ ಅನ್ನು ಅಡ್ಜರ್ನ್ ಮಾಡುವಂತೆ ಆ ನೀರೆಣ್ಣೆಯನ್ನು ಹೊರಗೊಯ್ದು ಬಚ್ಚಲಿಗೆ ಸುರಿದೆ. ಬರ್ನಾಲ್ ವದನನಾಗಿ ‘ಮರಳಿ ಯತ್ನವ ಮಾಡು ಮನುಜ’ ವಾಕ್ಯಕ್ಕೆ ಬದ್ಧನಾದೆ.
ಅಂತೂ ಇಂತೂ ಹೊಸರುಚಿ ಕಾರ್ಯಕ್ರಮದ ಶುದ್ಧಕನ್ನಡಿಗರು ಹೇಳುವಂತೆ ಚಿಲ್ಲೀಸ್, ಕೋರಿಯಾಂಡರ್, ದಾಲ್ಸ್, ಮಸ್ಟರ್ಡುಗಳನ್ನು ಆಯಿಲ್ಲಲ್ಲಿ ಫ್ರೈ ಮಾಡಿ ಅವೆಲ್ಲವೂ ಶಕ್ತ್ಯಾನುಸಾರ ಸಳಸಳ, ಚಿಟಿಪಿಟಿ, ಕೆಂಪುಕೆಂಪು, ಕರಿಕರಿ ಆದಮೇಲೆ ನೀರು ಸುರಿದು ಅವುಗಳೆಲ್ಲವುಗಳ ಸದ್ದಡಗಿಸಿ ‘ಸೋಜಿ’ ಫ್ರೈ ಮಾಡಲೆಂದು ಮತ್ತೊಂದು ಬಾಂಡಲೆಯನ್ನು ಈ ಬರ್ನರ್‌ನ ಸಯಾಮೀ ಸಿಸ್ಟರ್ ಆದ ಮತ್ತೊಂದು ಬರ್ನರನ್ನು ಮತ್ತೆಂಟು ಲೈಟರ್ ಕ್ಲಿಕ್ಕುಗಳ ಮೂಲಕ ಲೈಟಿಸಿದೆ.
‘ರವಾ ರೌರವ ಅಗದಂತೆ ನೋಡಿಕೊಳ್ಳಿ. ಚೀನಾದವರ ಮೈಬಣ್ಣದ ಬಿಳಿ ಇರುವ ರವೆ ಅಲ್ಲಲ್ಲಿ ಟ್ರಂಪ್ ಮುಖದಷ್ಟು ಕೆಂಪಾಗಲಿ. ಕರೀನಾ ಕಪೂರಳ ಮೊದಲರ್ಧಭಾಗದ ಪೂರ್ವಾರ್ಧ ಮಾಡಿಬಿಟ್ಟೀರಿ’ ಎಂದು ಎಚ್ಚರಿಸಿದಳು. ಕರೀನಾ ಕಪೂರಳ ಮೊದಲರ್ಧಭಾಗ ಕರೀನಾ; ಅದರ ಪೂರ್ವಾರ್ಧ ಕರಿ!
ಅಂತೂ ಇಂತೂ ಹುರಿದ ರವೆ ಮಿಕ್ಕೆಲ್ಲ ಮಿಶ್ರಣಗಳೊಡನೆ ಅತ್ತೆಯ ಮನೆಗೆ ಸೊಸೆ ಸೇರಿದಂತೆ ಸೇರಿತು – ಸೀರಿಯಲ್‌ಗೆ ಜೊತೆಗುಂಟು, ರಿಯಲ್‌ಗೆ ಜೊತೆಯಿಲ್ಲ ಎನ್ನುವ ರೀತಿ. ಇಕ್ಕಳದ ಕೈಯಲ್ಲಿ ಬಾಂಡಲೆ ಹಿಡಿದು, ಮೊಗಚುವ ಕೈಯಿಂದ ಮಿಶ್ರಣವನ್ನು ಕದಡಿದ್ದೇ ಕದಡಿದ್ದು, ಅದು ವಿರೋಧಪಕ್ಷಗಳು ಕ್ವಾರಂಟೈನಿನಲ್ಲಿ ಇರುವಂತೆ ‘ಸೋಷಿಯಲ್ ಡಿಸ್ಟೆನ್ಸ್’ ಮೇಯ್ನ್ಟೇಯ್ನ್ ಮಾಡಿದ್ದೇ ಮಾಡಿದ್ದು. ಕೋವಿಡ್ ಸೀನಿಗರಾದರೂ ಹತ್ತಿರ ಬಂದಾರು, ಉಪ್ಪಿಟ್ಟಿನ ಅಂಶಗಳು ಬರುತ್ತಿರಲಿಲ್ಲ.
‘ಮುಚ್ಚಳ ಮುಚ್ಚಿ ಬಿಟ್ಟುಬಿಡಿ ಕಾಲ್ಗಂಟೆ’ ಎಂದಿತು ವಾಯ್ಸೋವರ್. ಕಾಲುಗಂಟೆಯ ನಂತರ ಬಾಂಡಲೆಯಲ್ಲಿ ಇಣುಕಿದೆ. ಲೋಟದಲ್ಲಿ ಹಾಕಿಕೊಡುವ ಮಟ್ಟಕ್ಕೆ ‘ಲಿಕ್ವಿಡ್ ಉಪ್ಪಿಟ್ಟು’ ರೆಡಿಯಾಗಿತ್ತು. ಇಪ್ಪತ್ತೈದು ನಿಮಿಷಗಳ ನಂತರ ಗ್ಯಾಸ್ ಉಳಿಸುವ ಏಕೈಕ ಕಾರಣದಿಂದ ಉಪ್ಪಿಟ್ಟಿನ ಬಾಂಡಲೆಯನ್ನು ಕೆಳಕ್ಕಿಳಿಸಿದೆ. ಮೊಗಚುವ ಕೈಯನ್ನು ಉಪ್ಪಿಟ್ಟಿನೊಳಕ್ಕೆ ಇಳಿಬಿಟ್ಟೆ. ಅದು ಕೆಸರುಗದ್ದೆಯಲ್ಲಿ ನೆಟ್ಟ ಗೂಟದಂತೆ ನಿಂತಿತು.
ಕರೆಗಂಟೆ ಧ್ವನಿಸಿತು. ‘ಕೊರೋನಾ ಅವೇರ್‌ನೆಸ್ ಬಗ್ಗೆ ಪೋಸ್ಟರ್ ಅಂಟಿಸಕ್ಕೇಂತ ಬಂದಿದ್ವಿ. ಗಮ್ ಮುಗಿದುಹೋಯ್ತು’ ಎಂದ ಕಾರ್ಪೊರೇಷನಿ.
ಉಪ್ಪಿಟ್ಟಿನ ಬಾಂಡಲೆಯನ್ನು ಹೊರಗಿಟ್ಟೆ.




Saturday, 20 June 2020

ದ್ವಾರ್ಕಿಯ ಸಂಗೀತ ಛೀಮಾಂಸೆ ಹಾಸ್ಯ ಲೇಖನ - ಅಣುಕು ರಾಮನಾಥ್





‘ಜನರು ದೈನಂದಿನ ಬದುಕಿನ ಒತ್ತಡದ ನಡುವೆಯೂ ಸಂಗೀತದತ್ತ ಒಲವನ್ನು ತೋರುತ್ತಿರುವುದು ಸಂತೋಷದ ವಿಷಯ ಅಂತ ಮಂತ್ರಿಗಳೊಬ್ಬರು ಹೇಳಿದರಂತೆ ದ್ವಾರ್ಕೀ’ ಎಂದೆ.
‘ಹೌದು. ಯಾರನ್ನ ಏನೇ ಕೇಳಿದ್ರೂ ಏನೋ ಒಂದು ಗುನುಗು. ಏನಾದ್ರೂ ಒಂದು ಅಪಸ್ವರ ಇದ್ದೇ ಇರತ್ತೆ. ಅಂದ್ಹಾಗೇ, ಅಪಸ್ವರ ಅಂದ್ರೆ ಏನು ಗೊತ್ತಾ?’
ಎಂದಿನಂತೆ ನನ್ನ ಮೊದ್ದು ಮುಖಮುದ್ರೆಯನ್ನೇ ಮುಂದು ಮಾಡಿದೆ. ‘ನಿನ್ನದು ನಾಟಿ ರಾಗದ ಮುಖ. ಎಂದೂ ಅದು ಫಾರಮ್‌ಗೆ ಬರೋದೇ ಇಲ್ಲ ಬಿಡು. ‘ಅಮ್ಮಸ್ವರ’ ಅಂದ್ರೆ ಕಾದಸೀಸದಂತೆ ಕಿವಿಯಿಂದ ಹಾದು ತಲೆಗೆ ಸೇರಿ ಆಲೋಚನಾಶಕ್ತಿ ಬಂದ್, ಸೇವಾಮನೋಭಾವ ಜಾಗೃತಿ ಆಗುವಂತೆ ಮಾಡುವ ಸ್ವರ. ಅಪ್ಪಸ್ವರ ಎಂದರೆ ಮೇಕೆಯ ‘ಮ್ಯಾ’ದಂತೆಯೇ ಕೊಂಬು ಕಳೆದುಕೊಂಡು ಗಂಡ ಆದ ಗಂಡು ಹೊರಡಿಸುವ ‘ಹೂಂ’ ಎಂಬ ಏಕಾಕ್ಷರ ಸ್ವರ’
‘ಅಪಸ್ವರದ ಬಗ್ಗೆ ಹೇಳೋ ಅಂದ್ರೆ ಅಪ್ಪಸ್ವರದ ಬಗ್ಗೆ ಹೇಳಿದೆಯಲ್ಲೋ... ಅಪ್ಪ ಪದದಲ್ಲಿ ಒತ್ತಿದೆ’
‘ನನಗೂ ಅದು ಗೊತ್ತಿದೆ. ಆದರೆ ಸಂಸಾರದಲ್ಲಿ ಒತ್ತು ಕೊಡುವವಳು ಹೆಣ್ಣು, ಒತ್ತು ಕಳೆದುಕೊಂಡವನು ಗಂಡು ಅಂತಾನೂ ಗೊತ್ತಿದೆ. ಇಂಗ್ಲಿಷ್‌ನಲ್ಲಿ ಹೆಣ್ಣನ್ನು ಮಿಸೆಸ್ ಮತ್ತು ಗಂಡನ್ನು ಮಿಸ್ಟರ್ ಎಂದು ಕರೆಯಕ್ಕೆ ಕಾರಣವೇ ಅದು’
ಮತ್ತೆ ಮೊದ್ದುಮುಖದ ಪ್ರದರ್ಶನ ಮುಂದುವರೆಸಿದೆ.
‘ಸ್ಟರ್ ಆಗುವುದು, ಎಂದರೆ ಮಿಸುಕಾಡುವುದನ್ನೂ ಮಿಸ್ ಮಾಡಿಕೊಂಡು ಬಿದ್ದಲ್ಲೇ ಬಿದ್ದಿರುವವನೇ ಮಿಸ್‌ಸ್ಟರ್ ಉರುಫ್ ಮಿಸ್ಟರ್. ಮಿಸುಕಾಡದವನನ್ನು ಕಾಡಿ, ತನ್ನ ಮಾತುಗಳಿಗೆ ಎಸ್ ಎನ್ನುವಂತೆ ಪಳಗಿಸುವ ಮಿಸ್ಸೇ ಮಿಸೆಸ್ಸು’
‘ಮಿನಿಸ್ಟರ್ ಎಂದರೆ?’
‘ಸ್ಟರ್ ಎಂದರೆ ಗೊಂದಲ ಎಂದೂ ಅರ್ಥವಿದೆಯಲ್ಲ. ಮಿನಿ ಉರುಫ್ ಸಣ್ಣ ಗೊಂದಲವನ್ನು ಉಂಟುಮಾಡುವವನೇ ಮಿನಿಸ್ಟರ್. ಒತ್ತಡದ ಮಧ್ಯೆಯೂ ಸಂಗೀತದತ್ತ ಜನರ ಒಲವಿದೆ ಅಂತ್ಹೇಳಿ ಆ ಮಿನಿಸ್ಟರ್ ನನ್ನ ತಲೆಯಲ್ಲೊಂದು ಮಿನಿ ಸ್ಟರ್ ಆರಂಭಿಸಿದ’ ನುಡಿದ ದ್ವರ‍್ಕೀ
‘ಅದೆಂತಹ ಗೊಂದಲವೋ?’
‘ಯಾರು ಯಾರಿಗೆ ಯಾವ ಯಾವ ರಾಗ ಹೊಂದತ್ತೆ ಅನ್ನೋ ಆಲೋಚನೆಯನ್ನ ಆ ಹೇಳಿಕೆ ಬಡಿದೆಬ್ಬಿಸಿದೆ. ವಾತಾಪಿ ಗಣಪತಿಂ ಭಜೆ ಹಾಡು ಯಾವ ರಾಗದ್ದು ಗೊತ್ತಾ?’
‘ಹಂಸಧ್ವನಿ’

ವ್ಯಾಟ್ಸ್ಯಾಪ್ಪು ಟ್ವಿಟರ್ ಎಫ್‌ಬೀಂ ಭಜೆ ಹಂ ವ್ಯಾಟ್ಸ್ಯಾಪ್ಪು ಟ್ವಿಟರ್ ಎಫ್‌ಬೀಂ ಭಜೆ
ದಾಸ ನಾ ಸೋಷ್ಯಲ್ ಮೀಡ್ಯಾಗಳಿಗೆ... ದಾಸನಾ...
ವ್ಯಾಟ್ಸ್ಯಾಪ್ಪು ಟ್ವಿಟರ್ ಎಫ್‌ಬೀಂ ಭಜೇ....
ಟ್ವೀಟಾದಿ ಚ್ಯಾಟ್ಸ್ ಸಮಯದ ಹರಣಂ ವೂಟು ಇನ್ಸ್ಟಾಗ್ರಾಂ ಪ್ರಚಂಡ ಮಥನಂ
ಪೋಸ್ಟು ವಾಚನಂ ವಿಡಿಯೋ ದರ್ಶನಂ ಲೈಕು ಒತ್ತುವೆಂ ಪೋಕು ಮಾಡುವೆಂ
ವ್ಯಾಟ್ಸ್ಯಾಪ್ಪು ಟ್ವಿಟರ್ ಎಫ್‌ಬೀಂ ಭಜೆ
ಪುರಾ ತುಂಬ ಸುತ್ತುವೆಂ ಪ್ರತಿದಿನಂ ಇರ‍್ರುಫೋನ್ ಕರ್ಣದೊಳ್ ಗಿಡುಕುತಲಿಂ
ಕಿರೋ ಕರ‍್ಲೊ ಪ್ರಮುಖಾದಿ ಆರ್‌ಜೇ ಸ್ತುತಂ ಮ್ಯೂಸಿಕ್ ಫ್ಯಾನು ಆಗಿರ್ಪೆ ನಾಂ
ಪ್ರಚೋದನಾ ಸತ್ವ ಫಿಲ್ಮ್ ಆ್ಯಪ್‌ಗಳಂ ಡೌನ್‌ಲೋಡ್ ಮಾಡಿ ನೋಡುತಿರ್ಪೆಂ
ನಿರಂತರಂ ನೆಟ್ಟು ಬ್ಲಾಗು ನೋಟಂ ನಿಜ ಫ್ಯಾಮಿಲಿಗೆ ನಾ ದಂಡಪಿಂಡಂ
ನೆಟ್ವರ್ಕಿನ ಪಾಶ ಪ್ರಖರಂ ತೀವ್ರಂ ಸೆಳೆತ ಬೆಳೆವುದು ಭೂತಾಕಾರಂ
ಪಾರಾಗಕ್ಕಿರುವುದು ಒಂದೇ ಸೂತ್ರಂ ಸೆಲ್‌ಫೋನ್ ದೂರ ಇಡುವುದೆ ಕ್ಷೇಮಂ
ವ್ಯಾಟ್ಸ್ಯಾಪ್ಪು ಟ್ವಿಟರ್ ಎಫ್‌ಬೀಂ ಭಜೇ....

ಇದು ಯಾವ ರಾಗದ್ದು?’
‘ಇದೂ ಅದೇ ರಾಗ ಅಲ್ವಾ?’
‘ಪರಿಣಾಮದ ಮೇಲೆ ರಾಗ ತೀರ್ಮಾನ ಮಾಡಬೇಕು. ಮಳೆ ಬರಿಸಿದರೆ ಮೇಘಮಲ್ಹಾರ, ದೀಪ ಹೊತ್ತಿಸಿದರೆ ದೀಪಕ ರಾಗ. ಮನಕ್ಕೆ ಮುದ ನೀಡಿದರೆ ಹಂಸಧ್ವನಿ. ಸಮಾಜಕ್ಕೇ ಕೋಟಲೆ ಕೊಟ್ಟರೆ ಹಿಂಸೆಧ್ವನಿ. ಈ ಸೆಲ್‌ಫೋನ್ ಹಾಡಿನದು ಹಿಂಸೆಧ್ವನಿ ರಾಗ. ಒಂದೊಂದು ಕಾಲಕ್ಕೆ ಒಂದೊಂದು ರಾಗ ಮುಖ್ಯವಾಗಿರತ್ತೆ’
‘ನಾನು ಅಂಜಲೀಬದ್ಧನಾಗಿದೇನೆ. ಅದಾವ ರಾಗ ಅದಾವ ಸಮಯಕ್ಕೆಂದು ಪೇಳ್ ದ್ವರ‍್ಕೀ... ನೀನೇ ನನಗೆ ರಾಗಾಲಯದ ದ್ವಾರದ ಕೀ’ ಎಂದೆ.
‘ಮೊದಲಿಗೆ ಪುರುಷರ ವಿಷಯವನ್ನೇ ತೆಗೆದುಕೊಳ್ಳೋಣ. ಮೊದಮೊದಲಿಗೆ ಇವರಿಗೆ ‘ಚಕ್ರವಾಕ’ ಅಥವ ಅದರ ಹಿಂದೂಸ್ತಾನಿ ಕಸಿನ್ ಆದ ‘ಆಹಿರ್ಭೈರವಿ’ ರಾಗ ಹೊಂದುತ್ತದೆ. ಚಕ್ರವನ್ನು ಹಿಡಿದು ಅರ್ಥಾರ್ ಡ್ರೈವ್ ಮಾಡುತ್ತಲೇ ವಾಕ್ಕಿನಲ್ಲೂ ತೊಡಗುವ ಕಾರಣದಿಂದ ಚಕ್ರವಾಕ ಇವರಿಗೆ ಹೊಂದುವುದಲ್ಲದೆ ಆಹಿರ್ಭೈರವಿಯ ‘ಪಿಬರೇ ರಾಮರಸಂ’ ಹಾಡನ್ನು ಗುನುಗುನಿಸುತ್ತಲೇ ರಾಮರಾಮಾ ಎನ್ನುವಂತಹ ರಸಗಳನ್ನೂ ಸೇವಿಸುವುದೂ ಮತ್ತೊಂದು ಕಾರಣವಾಗಿದೆ. ಕ್ರಮೇಣ ಗೂಳಿಯಂತೆ ನುಗ್ಗುವ ಇವರಿಗೆ ರಿಷಭಪ್ರಿಯ ರಾಗವೂ, ರೋಡ್ ರೇಜ್ ಕಾರಣದಿಂದ ಕತ್ತೆಯಂತೆ ಅರಚುತ್ತಾ ಜಗಳವಾಡುವುದರಿಂದ ಖರಹರಪ್ರಿಯ ರಾಗವೂ, ಚೆಲುವೆಯೊಬ್ಬಳು ರಸ್ತೆಯ ಆ ತುದಿಯಿಂದ ಈ ತುದಿಯವರೆಗೆ ಹಾದುಹೋಗುವವರೆಗೆ ಅವಳತ್ತಲೇ ಮುಖ ಮಾಡಿ ಕೂಡುವ ಚಾಳಿ ಇರುವುದರಿಂದ ಸೂರ್ಯಕಾಂತ ರಾಗವೂ ಹೊಂದುತ್ತದೆ. ಕೆಲವು ಹುಡುಗರ ಮುಖ ಆಂಜನೇಯನನ್ನು ಹೋಲುತ್ತಿದ್ದು, ನೋಡಿದವರಿಗೆ ‘ಹನುಮತೋಡಿ’ ರಾಗವು ನೆನಪಾಗುವುದಾದರೂ, ಕೆಲವು ಹುಡುಗಿಯರಿಗೆ ‘ವನಸ್ಪತಿ’ ರಾಗಕ್ಕೆ ಹೊಂದುವ ಉರುಫ್ ಒರಟು ಸ್ವಭಾವದ ಪತಿಯೇ ಇಷ್ಟವಾಗುವುದರಿಂದ, ಅಂತಹ ಹುಡುಗಿಯರಿಂದ ಆಕರ್ಷಿತರಾದ ಹುಡುಗರು ಅವರನ್ನು ಮೆಚ್ಚಿಸುವ ಸಲುವಾಗಿ ಹಣ ಹೊಂದಿಸಲೆಂದು ‘ಸಾಲಗ’ ರಾಗಕ್ಕೆ ಮೊರೆಹೋಗಿ ಸಾಲಗಾರರಾಗುತ್ತಾರೆ. ಕ್ರಮೇಣ ‘ರೂಪವತಿ’, ‘ಮಾನವತಿ’, ‘ನೀತಿಮತಿ’ ರಾಗಗಳ ಲಯಕ್ಕೆ ಸಿಲುಕುತ್ತಾ ವಿವಾಹವಾಗಿ ಕದನಕುತೂಹಲದಲ್ಲಿ ಇವರ ರಾಗ ವಿಲೀನವಾಗುತ್ತದೆ’
‘ಗಂಡಿನ ರಾಗವಾಯ್ತು, ಹೆಣ್ಣಿನ ಅನುರಾಗವೇನು?’
‘ಸರಿಯಾಗಿ ಹೇಳಿದೆ. ಅಂದಿನಂದಿನ ಇಚ್ಛೆಗೆ ಅನುಸಾರವಾಗಿ ರಾಗವನ್ನು ಅನುಸರಿಸುವುದರಿಂದ ಇವರದನ್ನು ಅನುರಾಗ ಅನ್ನಬಹುದು. ಕೇವಲ ಚಿನ್ನದ ಆಭರಣಗಳನ್ನೇ ಬಯಸುವ ಕಾಲದಲ್ಲಿ ಇವರದು ‘ಕನಕಾಂಗಿ’ ರಾಗ. ಕ್ರಮೇಣ ಹರಳುಗಳನ್ನು ಹುದುಗಿಸಿಕೊಳ್ಳುವ ಕಾರಣದಿಂದ ‘ರತ್ನಾಂಗಿ’ ರಾಗ ಹಿಡಿಯುವ ಇವರು ಅವೆಲ್ಲಕ್ಕೂ ಅಪ್ಲಿಕೇಶನ್ ಹಾಕಿದಾಗ ‘ಕೋಕಿಲಪ್ರಿಯ’ ರಾಗವನ್ನು ಹಿಡಿಯುತ್ತಾರೆ. ಇದೇ ಸಮಯದಲ್ಲಿ ‘ಸರಸಾಂಗಿ’ ಮತ್ತು ‘ಕೀರವಾಣಿ’ ರಾಗಗಳ ಪ್ರಯೋಗವೂ ಆಗುತ್ತದೆ’
‘ಪತಿಯೇನಾದರೂ/ಬಾಯ್‌ಫ್ರೆಂಡೇನಾದರೂ ಇವರ ಇಚ್ಛೆಗೆ ವಿರೋಧ ವ್ಯಕ್ತಪಡಿಸಿದರೆ?’
‘ಶ್ಯಾಮಲವರ್ಣದ ಲಾಂಗ್ ಆಗಿರುವ ರೆಪ್ಪೆಗಳನ್ನು ಪಟಪಟನೆ ಬಡಿದು ‘ಶ್ಯಾಮಲಾಂಗಿ’ ರಾಗದಲ್ಲಿ ಆಲಾಪ ತೆಗೆದು ‘ನಾಗಾನಂದಿನಿ’ ರಾಗದಲ್ಲಿ ಫೂತ್ಕರಿಸಿ, ‘ಸಿಂಹೇAದ್ರಮಧ್ಯಮ’ ರಾಗಕ್ಕೆ ತಕ್ಕಂತಹ ಪೋಸ್ ಕೊಡತ್ತಾ ನಿಲ್ಲುತ್ತಾರೆ. ಕೂಡಲೆ ಪತಿ/ನಲ್ಲನು ‘ಚಲನಾಟ’ ರಾಗದಲ್ಲಿ ಆರಂಭಿಸಿ, ‘hurry, calm ಹೋ ಜೀ’ ರಾಗದ ಆಲಾಪ ತೆಗೆದು ‘ಶೂಲಿನಿ’ ರಾಗದ ಉಪಸಂಹಾರ ಮಾಡುತ್ತಾನೆ’
‘ವ್ಯಕ್ತಿವಿಶೇಷವೇನೋ ಸರಿ; ಕಾಲವಿಶೇಷ?’
‘ಆಗಿನ ಸ್ತ್ರೀಯರದು ‘ಗಾಂಗೇಯಭೂಷಣಿ’ ರಾಗ. ಗಾಂಗೇಯನಾದ ಭೀಷ್ಮನ ಕೇಶರಾಶಿಯಂತೆಯೇ ಹುಲುಸಾದ ಕೇಶರಾಶಿ ಉಳ್ಳವರು. ಈಗಿನ ಸ್ತ್ರೀಯರು ಹುಲು ಕೇಶರಾಶಿಯವರು. ಆದ್ದರಿಂದ ನಾಲ್ಕಿಂಚಿನ ಕೇಶಕ್ಕೇ ಸೀಮಿತರಾದ ಇವರದು ‘ಚಾರುಕೇಶಿ’ ರಾಗ. ಅಂದಿನ ನೃತ್ಯಗಾತಿಯರದು ‘ಶಿವರಂಜಿನಿ’ ರಾಗ. ಈಗ ಮೈಯೆಲ್ಲಾ ಅದುರಿಸಿ ‘shiver’ ಆಗುತ್ತಾ ಅಂಜಿಸುವAತಹ ಶಿರ‍್ರಂಜಿನಿ ರಾಗ’
‘ಗಂಡು ಹೆಣ್ಣಲ್ಲದೆ ಸಾಮಾಜಿಕ ನೋಟದಲ್ಲಿ ನೋಡಿದಾಗ?’
‘ನಾಟಿ ರಾಗ ಎರಡು ಗುಂಪಿಗೆ ಹೊಂದುತ್ತದೆ. ಸಾವಯವ ಬೆಲೆ ಬೆಳೆಯುವ ಕೃಷಿಕರ ‘ನಾಟಿ’ ರಾಗ; ತುಂಟಾಟವೇ ಮೈವೆತ್ತಂತಹ ಹದಿಹರೆಯದವರ ‘naughty’ ರಾಗ. ಕಾರ್ಪೊರೇಷನ್, ಪಾಲಿಕೆ, ಬಿಎಸ್ಸೆನ್ನೆಲ್, ವಿದ್ಯುತ್ ಕಂಪನಿ, ಮುಂತಾದವರು ಯಾವಾಗಲೂ ರಸ್ತೆ ಅಗೆಯುವದನ್ನೇ ಇಷ್ಟ ಪಡುವುದರಿಂದ ಅವರದು ‘ತೋಡಿ’ ರಾಗ. ಆಟೋ, ವೋಲಾಗಳವರು ಒಂದೇ ಸಮಯದಲ್ಲಿ ಹಲವಾರು ದಿಕ್ಕುಗಳಿಗೆ ಸಂಚರಿಸುವುದದ ಅವರದು ‘ಷಡ್ವಿದಮಾರ್ಗಿಣಿ’ ರಾಗ. ನಗರಗಳಲ್ಲಿ ಹವಾಮಾನ ಗಬ್ಬೆದ್ದು ಮಾಲಿನ್ಯಭರಿತವಾಗಿ ‘ಸರ್ವಂ ಮಲಿನಮಯಂ ಜಗತ್’ ಆಗಿರುವುದರಿಂದ ಮೂಗಿಗೆ ಬಟ್ಟೆ ಕಟ್ಟಿಕೊಂಡೇ ಚಲಿಸುವರಿಗೆ ‘ನಾಸಿಕಭೂಷಣಿ’ ರಾಗ. ಸದನದಲ್ಲಿ ಕಚ್ಚಾಡುವ ಶಾಸಕರಿಗೆ ‘ಸದನಕುತೂಹಲ’ ರಾಗ, ಜೋರಾಗಿ ಹಾರ್ನಿಸುತ್ತಾ ಅಡ್ಡಾದಿಡ್ಡಿ ಸಾಗುವ ಶೂರರಿಗೆ ‘ಧೀರಶಂಖಾಭರಣ’ ರಾಗ; ಸೀರಿಯಲ್‌ಗಳ ದಾಸರಾಗಿ ಗೋಳಳುವಿನ ಮಳೆ ಸುರಿಸುವವರಿಗೆ ‘ವರುಣಪ್ರಿಯ’ ರಾಗ’
‘ನಿನಗಿಷ್ಟವಾದವು ಯಾವುವು ದ್ವಾರ್ಕಿ?’
‘ರಾಗ ಸರಾಗ, ತಾಳ ಬೇತಾಳ’ ಎನ್ನುತ್ತಾ ಯಾವುದೋ ಆಲಾಪ ಆರಂಭಿಸಿದ ದ್ವಾರ್ಕಿ.
ಕಿವಿತಮಟೆಯ ರಕ್ಷಣೆಯೇ ಸಲುವಾಗಿ ನಾನು ‘ಗಮನಶ್ರಮ’ ರಾಗವನ್ನು ಆಶ್ರಯಿಸಿದೆ. 


ಕೃಪೆ: Horanadachilume, Sydney, Australia.

Monday, 15 June 2020

ಕೊರೋನಾ ಹಾಡು (ದೂರದಿಂದ ಬಂದಂಥ ಸುಂದರಾಂಗ ಜಾಣ ಧಾಟಿ)

ಚೀನದಿಂದ ಬಂದಂಥ ನಾವೆಲು ಕೊರೋನಾ

ಸೀನಿನಲ್ಲೆ ಸೂರೆಗೊಂಡೆ ಸಾವಿರಾರು ಪ್ರಾಣ

ಚೀನದಿಂದ ಬಂದಂಥ ನಾವೆಲು ಕೊರೋನಾ

ಸೀನಿನಲ್ಲೆ ಸೂರೆಗೊಂಡ ಸಾವಿರಾರು ಪ್ರಾಣ

ಈತನಂತ್ಯವಿನ್ನು ಹೇಗೋ ರೀತಿ ನೀತಿ ಹೇಗೋ

ನಾ ಕಾಣೆ ನಾ ಕಾಣೆ ವೈದ್ಯಕೀಯದಾಣೆ

ಭಲಾರೆ ಇವ ಭಾರಿ ಕ್ರೂರಘೋರ

ಭಲಾರೆ ಇವ ತೀರ ಪ್ರಾಣಚೋರ

ಭಲಾರೆ ಇವ ಭಾರಿ ಕ್ರೂರಘೋರ

ಭಲಾರೆ ಇವ ತೀರ ಪ್ರಾಣಚೋರ

ಅಹ ಅಹ ಅಹ ಅಹ

ಚೀನದಿಂದ ಬಂದಂಥ ನಾವೆಲು ಕೊರೋನಾ

 

ದೇಶ ಸುತ್ತಿ ಬಂದಾಗ ಕ್ವಾರಂಟೈನಲಿ

ಹೋಗಿ ಸೇರಲಿ ಯಾರೆ ಆಗಲಿ

ದೇಶ ಸುತ್ತಿ ಬಂದಾಗ ಕ್ವಾರಂಟೈನಲಿ

ಹೋಗಿ ಸೇರಲಿ ಯಾರೆ ಆಗಲಿ

ಸೀನು ಕೆಮ್ಮು ಬಂದಾಗ ಮಾಸ್ಕು ಹಾಕಿಕೊ

ಸೋಪು ಹಾಕಿಕೊ ಕೈಯ ತೊಳೆದುಕೋ

ಫ್ರೆಂಡು ಗಿಂಡು ಕಂಡಾಗ ಹತ್ರ ಹೋಗಬೇಡ

ಮುಂದೆ ನಿಂತು ಕೈ ಕೈ ಷೇಕು ಮಾಡಬೇಡ

ಇಂದು ಕೂಡಿ ಬಂದ ವೇಳೆ  ಹೇಗೊ ಏನೊ ನಾಳೆ

ನಾ ಕಾಣೆ ನಾ ಕಾಣೆ ವೈದ್ಯಕೀಯದಾಣೆ

ಭಲಾರೆ ಇವ ಭಾರಿ ಕ್ರೂರಘೋರ

ಭಲಾರೆ ಇವ ತೀರ ವೇಗಗಾರ

ಭಲಾರೆ ಇವ ಭಾರಿ ಕ್ರೂರಘೋರ

ಭಲಾರೆ ಇವ ತೀರ ಪ್ರಾಣಚೋರ

ಅಹ ಅಹ ಅಹ ಅಹ

ಚೀನದಿಂದ ಬಂದಂಥ ನಾವೆಲು ಕೊರೋನಾ

 

ಆಚೆ ಬಂದು ಶೋಕಾಗಿ ನಿಲ್ಲಬಾರದು

ಓಡಬಾರದು ನಡೆಯಬಾರದು

ದೂರವಿದ್ರೆ ಮೇಲೆಂದು ಅಂದುಕೊಂಡರೆ

ಹೊಂದಿಕೊಂಡರೆ ಇಲ್ಲ ತೊಂದರೆ

ಧೀರ ಶೂರ ನೀನೆಂದು ಜಂಭ ಮಾಡಬೇಡ

ಸೋಂಕು ತಗುಲದೆಂದು ನಂಬಿ ಹುಂಬನಾಗಬೇಡ

ಒಮ್ಮೆ ಬಂದು ದೇಹವೆಲ್ಲ

ಹಿಂಡಿ ಹೋದ ಮೇಲೆ

ನಾ ಕಾಣೆ ನಾ ಕಾಣೆ ವೈದ್ಯಕೀಯದಾಣೆ

ಭಲಾರೆ ಇವ ಭಾರಿ ಕ್ರೂರಘೋರ

ಭಲಾರೆ ಇವ ತೀರ ವೇಗಗಾರ

ಭಲಾರೆ ಇವ ಭಾರಿ ಕ್ರೂರಘೋರ

ಭಲಾರೆ ಇವ ತೀರ ಪ್ರಾಣಚೋರ

ಅಹ ಅಹ ಅಹ ಅಹ

ಚೀನದಿಂದ ಬಂದಂಥ ನಾವೆಲು ಕೊರೋನಾ

Saturday, 13 June 2020

ತಾತನ ತಾಪತ್ರಯ (ಒಂದು ಪ್ರಹಸನ)


ತಾತ: ತುಂಬಾ ಹೊಟ್ಟೆ ಉರೀತಿದೆ ಡಾಕ್ಟ್ರೆ

ಡಾಕ್ಟರ್: ಡೋಂಟ್ ವರಿ, ಮಾತ್ರೆ ಕೊಡ್ತೀನಿ

ತಾತ: ಬೇಡ. ಉಸಿರಾಡಕ್ಕಾಗಲ್ಲ

ಡಾಕ್ಟರ್: ಯಾಕೆ?

ತಾತ: ಕೈ ನಡುಗತ್ತೆ. ಮಾತ್ರೆ ಬಾಯಿಗೆ ಹಾಕ್ಕೊಳಕ್ಕೆ ಹೋಗಿ ಎಷ್ಟೋ ಸರಿ ಮೂಗಿಗೆ ಒಳ್ಳೆ ವೆಡ್ಜ್ ಆದ ಹಾಗೆ ಕೂತ್ಬಿಡತ್ತೆ.

ಡಾಕ್ಟರ್: ಔಷಧಿ ಕೊಡ್ತೀನಿ

ತಾತ: ಬೇಡ. ಹೆಂಡ್ರಿ ಬೈತಾಳೆ

ಡಾಕ್ಟರ್: ಯಾಕೆ ಬೈತಾರೆ?

ಡಾಕ್ಟರ್: ಇಂಜೆಕ್ಷನ್ನು?

ತಾತ: ನೋವಾಗತ್ತೆ. ಒಂದ್ಸರ್ತಿ ಇಂಜೆಕ್ಷನ್ ತೊಗೊಂಡಿದ್ದೆ, ತಕ್ಷಣ ಟೈರ್ ಅಂಗಡೀಗೆ ಹೋದೆ.

ಡಾಕ್ಟರ್: ಯಾಕೆ?

ತಾತ: ನರ್ಸ್ ಮಾಡಿದ ತೂತಿಗೆ ಪಂಕ್ಷರ್ ಹಾಕಿಸ್ಕೊಳಕ್ಕೆ.

ಡಾಕ್ಟರ್: ಸರೀ, ಹೊಟ್ಟೆ ಉರಿ ಶುರು ಆಗಿದ್ದು ಯಾವಾಗ?

ತಾತ: ಪಕ್ಕದ ಮನೆಯವನು ಹೊಸ ಕಾರ್ ತೊಗೊಂಡಾಗ್ಲಿಂದ!

ಡಾಕ್ಟರ್: ನೀವು ವಯಸ್ಸಲ್ಲಿ ತರಹ ಹೊಟ್ಟೆ ಉರ್ಕೋಬಾರ್ದು

ತಾತ: ಹಾಗಾದ್ರೆ ಹೊಟ್ಟೆ ಉರ್ಕೊಳಕ್ಕೆ ಸರಿಯಾದ ವಯಸ್ಸು ಯಾವುದು ಡಾಕ್ಟ್ರೆ?

ಡಾಕ್ಟರ್: ತಾತಾ... ನನ್ನ ಕ್ಲಿನಿಕ್ ಟೈಂ ವೇಸ್ಟ್ ಮಾಡ್ಬೇಡಿ. ನಿಮಗೆ ನಿಜವಾಗಲೂ ಏನಾಗ್ತಿದೆ ಹೇಳಿ

ತಾತ: ವಯಸ್ಸಾಗ್ತಿದೆ ಡಾಕ್ಟ್ರೆ.

ಡಾಕ್ಟರ್: ತಾತಾ.....

ತಾತ: ನನ್ನ ಎಡಗಡೆ ಕಾಲು ಬಹಳ ನೋವತ್ತೆ.

ಡಾಕ್ಟರ್: ಅದು ವಯಸ್ಸಾಗಿರೋದ್ರಿಂದ ಹಾಗೆ ತಾತ.

ತಾತ: ಸುಮ್ಮನೆ ಏನೋ ಹೇಳ್ಬೇಡಿ ಡಾಕ್ಟ್ರೆ. ನನ್ನ ಬಲಗಾಲಿಗೂ ಅಷ್ಟೇ ವಯಸ್ಸಾಗಿದೆ, ಅದ್ಯಾಕೆ ನೋಯ್ತಿಲ್ಲ?

ಡಾಕ್ಟರ್: ಅದು ಹಾಗಲ್ಲ; ನಾವು ಯಾವುದರ ಮೇಲೆ ಭಾರ ಬಿಡ್ತೀವೋ ಅದು ನೋವು ಬರತ್ತೆ.

ತಾತ: ಆದರೆ ನಾನು ಭಾರ ಬಿಡೋದು ವಾಕಿಂಗ್ ಸ್ಟಿಕ್ ಮೇಲೆ. ಅದಕ್ಕೇ ಅಯೋಡೆಕ್ಸ್ ಹಚ್ಚಿಬಿಡ್ಲೇನು?

ಡಾಕ್ಟರ್: ತಾತಾ...

ತಾತ: ನೀವು ಡಾಕ್ಟರ್ಗಳೇ ಹಾಗೆ

ಡಾಕ್ಟರ್: ಹೇಗೆ?

ತಾತ: ಪೇಷೆಂಟ್ ಬರ್ತಾ ಇದ್ದಹಾಗೇ ತಾ ತಾ ಅಂತ ಬರೀ ಕೈಯೊಡ್ಡೋದೇ ಆಗ್ಹೋಯ್ತು.

ಡಾಕ್ಟರ್: ಪ್ಲೀಸ್ ಅಜ್ಜ, ನನ್ನ ತಲೆ ತಿನ್ಬೇಡಿ. ನಿಮ್ಮ ಕಂಪ್ಲೇಂಟ್ ಏನೂಂತ ಹೇಳಿ.

ತಾತ: ಬೆಳಗ್ಗೆ ಪಾರ್ಕಲ್ಲಿ ಜೋರಾಗಿ ಓಡಿದಾಗ ಎದೆ ಬಹಳ ಜೋರಾಗಿ ಹೊಡ್ಕೊಳತ್ತೆ

ಡಾಕ್ಟರ್: ವಯಸ್ಸಲ್ಲಿ ನೀವು ಜೋರಾಗಿ ಓಡ್ತೀರಾ?

ತಾತ: ನಾನಲ್ಲ

ಡಾಕ್ಟರ್: ಮತ್ತೆ?

ತಾತ: ಸೂಪರ್ ಆಗಿರೋ ಹುಡುಗಿಯರು ಓಡ್ತಾರೆ, ನನ್ನೆದೆ ಹೊಡ್ಕೊಳತ್ತೆ.

ಡಾಕ್ಟರ್: ಅಜ್ಜ... ಪ್ಲೀಸ್ ಬಿ ಸೀರಿಯಸ್

ತಾತ: ಯಾಕೆ ಡಾಕ್ಟ್ರೆ, ಸೀರಿಯಸ್ ಆದ್ರೆ ಒಳ್ಳೆ ಕಾಸು ಎಳ್ಕೋಬಹುದು ಅಂತಾನಾ?

ಡಾಕ್ಟರ್: ಥೂ, ತರಹ ಸೀರಿಯಸ್ಸಲ್ಲ ಅಜ್ಜ ನಾ ಹೇಳಿದ್ದು. ಸರಿ, ಈಗ ಇಲ್ಲಿಗೆ ಬಂದಿದ್ದಾದ್ರೂ ಯಾಕೆ ಹೇಳಿ.

ತಾತ: ಹೇಳಿದ್ನಲ್ಲ ಡಾಕ್ಟ್ರೇ, ಕಾಲು ಬಹಳ ನೋಯತ್ತೆ ಅಂತ

ಡಾಕ್ಟರ್: ಸರಿ. ಒಬ್ಬ ಸರ್ಜನ್ಗೆ ರೆಫರ್ ಮಾಡ್ತೀನಿ, ಅಲ್ಲಿ ತೋರಿಸಿ

ತಾತ: ಸರ್ಜನ್ನಾ? ಬೇಡ

ಡಾಕ್ಟರ್: ಯಾಕೆ?

ತಾತ: ಗಾದೆ ಕೇಳಿಲ್ಲವೇನು? ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ, ಸರ್ಜನರ ಸಹವಾಸ ಹೆಜ್ಜೇನು ಕಡಿದಂತೆ. ನನ್ನ ಫ್ರೆಂಡ್ಗೆ ಆಗಿದ್ದನ್ನ ಕೇಳಿ ಏನೇ ಆದರೂ ಸರ್ಜನ್ ಹತ್ರ ಹೋಗಬಾರದೂಂತ ಡಿಸೈಡ್ ಮಾಡಿದ್ದೀನಿ

ಡಾಕ್ಟರ್: ಏನಾಯ್ತು?

ತಾತ: ಹೊಟ್ಟೆ ಆಪರೇಷನ್. ಮೊದಲು ಮಾಡಿದರು. ಇವನಿಗೆ ಬಹಳ ಬಾಯಾರಿಕೆ ಶುರುವಾಯ್ತು.

ಡಾಕ್ಟರ್: ಏಕೆ?

ತಾತ: ಒಳಗೆ ಸ್ಪಂಜ್ ಬಿಟ್ಬಿಟ್ಟಿದ್ರು. ಮತ್ತೆ ಕೊಯ್ದ್ರು.

ಡಾಕ್ಟರ್: ಸರಿಹೋಯ್ತಾ?

ತಾತ: ಇಲ್ಲ. ಇದ್ದಕ್ಕಿದ್ದ ಹಾಗೆ ಆಕಡೆಯಿಂದ ಕಡೆಗೆ ತಿರುಗಿದಾಗಲೆಲ್ಲಾ ಒಳಗೆ ಕಚಕ್ ಅಂತ ಶಬ್ದ ಬರ್ತಿತ್ತು.

ಡಾಕ್ಟರ್: ಅಯ್ಯೋ, ಯಾಕಂತೆ?

ತಾತ: ಒಳಗೆ ಕತ್ತರಿ ಬಿಟ್ಬಿಟ್ಟಿದ್ರು. ಮತ್ತೆ ಹೊಟ್ಟೆ ಕೊಯ್ದಿದ್ದಾಯ್ತು.

ಡಾಕ್ಟರ್: ಆಗ ಸರಿಹೋಯ್ತೂನ್ನಿ.

ತಾತ: ಇಲ್ಲ. ಒಳಗೇ ಏನೋ ಚುಚ್ಚಿದಹಾಗೆ ಆಗ್ತಿತ್ತು. ನೋಡಿದ್ರೆ ಸೂಜಿ.

ಡಾಕ್ಟರ್: ಮತ್ತೆ ಆಪರೇಷನ್ ಆಯ್ತೂನ್ನಿ.

ತಾತ: ಇಲ್ಲ.

ಡಾಕ್ಟರ್: ಮತ್ತೆ?

ತಾತ: ಹೊಟ್ಟೆ ಮೇಲೆ ಒಂದು ಮ್ಯಾಗ್ನೆಟ್ ಕಟ್ಕೊಂಡ್ಬಿಟ್ಟಿದ್ದಾನೆ. ಈಗ ಸೂಜಿ ಅಲ್ಲಾಡದೆ ಒಂದೇ ಜಾಗದಲ್ಲೇ ಇರೋದ್ರಿಂದ ನೋವಿಲ್ಲ!

ಡಾಕ್ಟರ್: ಒಳಗೆ ರಸ್ಟ್ ಆಗ್ಬಿಟ್ರೆ?

ತಾತ: ಆಗಲ್ಲ, ಆಗಾಗ್ಗೆ ಹೊಟ್ಟೆಗೆ ಸ್ವಲ್ಪ ಎಣ್ಣೆ ಬಿಟ್ಕೊಳಕ್ಕೆ ಹೇಳಿದ್ದೀನಿ.

ಡಾಕ್ಟರ್: ಹಾಗೇ ಇರೋದು ಒಳ್ಳೇದಲ್ಲ ತಾತ. ತೆಗೆಸಿಕೊಂಡುಬಿಡಕ್ಕೆ ಹೇಳಿ.

ತಾತ: ‘, ಇನ್ನೇನಾದ್ರೂ ಒಳಗೆ ಬಿಡ್ತಾರೆ. ಇದೇ ವಾಸಿ ಅಂದ

ಡಾಕ್ಟರ್: ನೀವೇನಂದ್ರಿ?

ತಾತ: ಆಪರೇಷನ್ ಮಾಡಿಸ್ಕೋ, ಆದರೆ ಹೊಲಿಗೆ ಹಾಕಿಸ್ಕೋಬೇಡ ಅಂದೆ.

ಡಾಕ್ಟರ್: ಮತ್ತೆ?

ತಾತ: ಝಿಪ್ ಹಾಕಿಸ್ಕೋಂದೆ. ಏನೇ ಬಿಟ್ಟಿದ್ರೂ ಝಿಪ್ ಝರ್ ಅಂತ ಎಳೆಯೋದು, ತೆಗೆಯೋದು, ಝಿಪ್ ಎಳೆಯೋದು!

ಡಾಕ್ಟರ್: ಸೂಪರ್ ಐಡಿಯ ಅಜ್ಜ. ಆದರೂ, ನಿಮ್ಮ ಕಾಲುನೋವಿಗೆ ಒಮ್ಮೆ ಸರ್ಜನ್ನ ನೋಡಿಬಿಡಿ.

ತಾತ: ಬೇಡ.

ಡಾಕ್ಟರ್: ಯಾಕೆ?

ತಾತ: ನಮ್ಮ ಮನೆ ಹತ್ತಿರ ಇರೋ ಸರ್ಜನ್ ಬೋರ್ಡ್ ಹಾಕಿದ್ದಾನೆ.

ಡಾಕ್ಟರ್: ಏನಂತ?

ತಾತ: ನಮ್ಮಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರಿಗೆ ಶ್ರಾದ್ಧದ ಖರ್ಚು ಉಚಿತ ಅಂತ!

ಡಾಕ್ಟರ್: ಹೋಗಲಿ ಬಿಡಿ. ನಿಮಗೆ ಆಯುರ್ವೇದಿಕ್ ಟ್ರೀಟ್ಮೆಂಟೇ ಕೊಡ್ತೀನಿ.

ತಾತ: ಇದ್ದಿದ್ರಲ್ಲಿ ಸ್ವೀಟ್ ಆಗಿರೋ ಲೇಹ್ಯಾನೇ ಕೊಡಿ ಡಾಕ್ಟರ್

ಡಾಕ್ಟರ್: ಏನಾದರೂ ಡ್ರಿಂಕ್ಸ್ ಗಿಂಕ್ಸ್ ಅಭ್ಯಾಸ ಇದೆಯೇನು?

ತಾತ: ಈಗಿಲ್ಲ ಡಾಕ್ಟ್ರೆ. ನನಗೆ ಡ್ರಿಂಕ್ಸ್ ತೊಗೊಂಡ್ರೆ ಬಹಳ ನೆಗಡಿ ಆಗತ್ತೆ.

ಡಾಕ್ಟರ್: ಡಿಂಕ್ಸ್ ತೊಗೊಂಡ್ರೆ ನೆಗಡಿ ಆಗತ್ತಾ?

ತಾತ: ಹೂಂ ಕುಡಿದು ಬಂದಾಗ ಹೆಂಡತಿ ತಲೆಮೇಲೆ ನೀರು ಸುರೀತಾಳಲ್ಲಾ, ಅದರಿಂದ ನೆಗಡಿ ಆಗತ್ತೆ.

ಡಾಕ್ಟರ್: ಓಕೆ. ಅಲ್ಲಿಗೆ ನೋ ಡ್ರಿಂಕ್ಸ್ ಅಂತಾಯ್ತು. ಖಾರ ತಿಂತೀರಾ?

ತಾತ: ನನ್ನ ಹೆಂಡತಿ ಮಾತಿನ ಮುಂದೆ ಮೆಣಸಿನಪುಡೀನೂ ಸ್ವೀಟ್ ಡಾಕ್ಟ್ರೆ!

ಡಾಕ್ಟರ್: ಅಂದರೆ ಹೆಂಡತಿ ಮಾತು ಕೇಳ್ತೀರಾನ್ನಿ.

ತಾತ: ಕೇಳದೆ ಇದ್ರೆ ಕಿವಿ ಆಪರೇಷನ್ ಮಾಡಿಸ್ತೀನಿ ಅಂತಾಳೆ ಡಾಕ್ಟ್ರೆ.

ಡಾಕ್ಟರ್: ಡ್ರಿಂಕ್ಸು, ಖಾರ ಇಲ್ಲಾಂದ್ಮೇಲೆ ನಿಮ್ಮ ಕಾಲುನೋವಿಗೆ ಕಾರಣ ವಾಯುಬಾಧೆ ಅಲ್ಲ; ನಿಮ್ಮ ನಿದ್ರೆ ಹೇಗಿದೆ?

ತಾತ: ರಿಟೈರಾದ ಸ್ವಲ್ಪ ದಿವಸ ನಿದ್ರೇನೇ ಬರ್ತಿರಲಿಲ್ಲ.

ಡಾಕ್ಟರ್: ಆಮೇಲೆ?

ತಾತ: ನಾನು ವರ್ಕ್ ಮಾಡ್ತಿದ್ದ ಸರ್ಕಾರಿ ಕಚೇರಿಯಿಂದ ನಾನು ದಿನಾ ಕೂತು ನಿದ್ರೆ ಮಾಡ್ತಿದ್ದ ಚೇರ್ ತರಿಸ್ಕೊಂಡೆ. ಅದರಲ್ಲಿ ಕೂತ್ರೆ ಸಾಕು, ಹೈ ಕ್ಲಾಸ್ ನಿದ್ರೆ ಬರತ್ತೆ.

ಡಾಕ್ಟರ್: ಸರಿ; ನಿದ್ರೆ, ವಾಯು ಪ್ರಾಬ್ಲಂ ಅಲ್ಲಾಂತಾಯ್ತು. ನಿಮಗೆ ಯಾವಾಗ ನೋವು ಜಾಸ್ತಿ ಇರತ್ತೆ?

ತಾತ: ಶನಿವಾರ, ಭಾನುವಾರ.

ಡಾಕ್ಟರ್: ಅದೇನು?

ತಾತ: ನನ್ನ ಹೆಂಡತಿ ಕಿಟ್ಟಿ ಪಾರ್ಟಿಗೆ ಹೋಗಿರ್ತಾಳೆ.

ಡಾಕ್ಟರ್: ಅದಕ್ಕೂ ಇದಕ್ಕೂ ಏನು ಸಂಬಂಧ?

ತಾತ: ನಮ್ಮ ಮನೆ ಹಿಂಭಾಗದಲ್ಲಿ ಒಂದು ಲೇಡೀಸ್ ಹಾಸ್ಟೆಲ್ ಇದೆ.

ಡಾಕ್ಟರ್: ಸರಿ. ಅದಕ್ಕೂ, ಕಿಟ್ಟಿ ಪಾರ್ಟಿಗೂ, ಕಾಲುನೋವಿಗೂ ಏನು ಸಂಬಂಧ?

ತಾತ: ಸುಮ್ಮನೆ ಹಾಗೆ ನಿಂತ್ರೆ ಹಾಸ್ಟೆಲ್ನಲ್ಲಿ ಹುಡುಗಿಯರು ಚೆಲ್ಲುಚೆಲ್ಲಾಗಿ ಆಡೋದು ಕಾಣಲ್ಲ

ಡಾಕ್ಟರ್: ಅದಕ್ಕೆ?

ತಾತ: ಒಂದು ಏಣಿ ಹಾಕ್ಕೊಂಡು ನಿಲ್ತೀನಿ.

ಡಾಕ್ಟರ್: ಹೂಂ?

ತಾತ: ಬಲಗಾಲು ಕಾಂಪೌಂಡ್ ಮೇಲಿರತ್ತೆ, ನೋವಿರಲ್ಲ, ಎಡಗಾಲು ಏಣಿ ಮೇಲಿರತ್ತೆ, ನೋವು ಬರತ್ತೆ!

ಡಾಕ್ಟರ್: ತಾತಾ... ವಯಸ್ಸಲ್ಲೀ... ಹುಡುಗೀರ್ನ ಕದ್ದು ನೋಡೋದೂಂದ್ರೆ.... ಛೀ!

ತಾತ: ಹಾಗೆಲ್ಲಾ ಬಿಡಕ್ಕಾಗತ್ತಾ, ಇದು ನನ್ನ ಗೋಲ್ಡನ್ ಜ್ಯೂಬಿಲಿ ವರ್ಷ ಗೊತ್ತಾ?

ಡಾಕ್ಟರ್: ನಿಮಗೆ ಇನ್ನೂ ಐವತ್ತೇನಾ?

ತಾತ: ನನಗಲ್ಲ, ಹುಡುಗೀರ್ನ ನೋಡಕ್ಕೆ ಶುರು ಮಾಡಿ ಐವತ್ತು ವರ್ಷ. 16ಕ್ಕೆ ಶುರು ಮಾಡ್ದೆ, ಈಗ 66!

ಡಾಕ್ಟರ್: ಟ್ರೀಟ್ಮೆಂಟ್ ಬೇಕಾದ್ದು ನಿಮ್ಮ ಕಾಲಿಗಲ್ಲ, ತಲೆಗೆ. ಗೆಟ್ ಔಟ್ ತಾತ. ಯಾವುದಾದರೂ ಹುಚ್ಚಾಸ್ಪತ್ರೇಲಿ ಟ್ರೀಟ್ಮೆಂಟ್ ತೊಗೊಳ್ಳಿ, ಸರಿಹೋಗತ್ತೆ.

ತಾತ: ಅಲ್ಲೂ ಹೋಗಿದ್ದೆ. ಸೇರಿಸ್ಕೊಳಲ್ಲಾಂದ್ರು

ಡಾಕ್ಟರ್: ಯಾಕಂತೆ?

ತಾತ: ಅಲ್ಲಿ ವಾಸಿಯಾಗೋ ಹುಚ್ಚರನ್ನು ಮಾತ್ರ ಸೇರಿಸ್ಕೊಳ್ತಾರಂತೆ!

ಡಾಕ್ಟರ್: ಸರಿ ಅಜ್ಜ. ನಿಮಗೇನು ಟ್ರೀಟ್ಮೆಂಟ್ ಕೊಡಬೇಕೂಂತ ಗೊತ್ತಾಯ್ತು. ನಿಮ್ಮ ಮನೆಯ ಫೋನ್ ನಂಬರ್ ಏನು?

ತಾತ: ಯಾಕೆ?

ಡಾಕ್ಟರ್: ಅಜ್ಜಿಗೆ ಕಿಟ್ಟಿ ಪಾರ್ಟಿ ಮನೇಲೇ ಇಟ್ಕೊಳ್ಳಕ್ಕೆ ಹೇಳ್ತೀನಿ, ನಿಮ್ಮ ಆಟ ಕಟ್ ಆಗಿ, ನೋವು ಮಾಯ ಆಗತ್ತೆ.

ತಾತ: ಥ್ಯಾಂಕ್ಯೂ ವೆರಿ ಮಚ್. ನನಗೂ ಅದೇ ಬೇಕಾಗಿತ್ತು.

ಡಾಕ್ಟರ್: ಯಾಕೆ?

ತಾತ: ಇವಳ ಕಿಟ್ಟಿ ಪಾರ್ಟೀಲಿ ಹಾಸ್ಟೆಲ್ ಹುಡುಗೀರಿಗಿಂತ ಚೆನ್ನಾಗಿರೋವ್ರು ಸೇರ್ತಾರೆ. ಥ್ಯಾಂಕ್ಸ್ ಡಾಕ್ಟರ್. ತೊಗೊಳ್ಳಿ, ನಂಬರ್ ಬರ್ಕೊಳ್ಳಿ!!!